ಕಾಲನ ದೂತರು ಕಾಲಪಿಡಿದೆಳೆವಾಗ …ತಾಳು ತಾಳೆಂದರೆ ತಾಳುವರೆ⁉

💢ಕಾಲನ ದೂತರು ಕಾಲಪಿಡಿದೆಳೆವಾಗ …ತಾಳು ತಾಳೆಂದರೆ ತಾಳುವರೆ⁉
ಹೀಗೆಂದು ಪುರಂದರದಾಸರು ಕೇಳುವರು,  ಮಾನವ ಜನ್ಮ ದೊಡ್ಡದು – ಎಂಬ ಪ್ರಸಿದ್ಧ ಕೃತಿಯಲ್ಲಿ. ಕೈಕಾಲು ಎಲ್ಲಾ ಸರಿಯಿರುವಾಗ ಸತ್ಕರ್ಮಗಳ ಮಾಡಬೇಕು. ಆ ನಂತರ ಮಾಡಲು ಆಗದು. 
ಸದ್ಗುರುವಿನಲ್ಲಿ ಭಕ್ತಿ, ಸತ್ಸಂಗ – ಇದರಿಂದ ಕರ್ಮ ಜ್ಞಾನ – ವಿವೇಕ ಬಂದು, ಉತ್ತಮ ಗತಿಗೆ ದಾರಿಯಾಗುತ್ತದೆ ಹೊರತು, ಬರಿದೇ ದುಡಿವ ಹಣ, ಕಾಮಕ್ಕೆ ಹುಟ್ಟಿದ ಮಕ್ಕಳು, ತಪ್ಪಿಹೋಗುವ ದೇಹ, ಗೇಹಗಳಿಂದ ಎಂದಿಗೂ ಅಲ್ಲ . ಪೂರ್ವದ ಸಮಸ್ತ ಜ್ಞಾನಿಗಳೂ ಇದನ್ನೇ ಸಾರುತ್ತಾ ಬಂದಿರುವುದು ಸಹಾ. ಮಾನವ ಜನ್ಮ ಇರುವುದೇ ಸದ್ಗತಿಗಾಗಿ. ಒಂದು , ಒಂದೇ ಸಾಲಿನ ತತ್ತ್ವ ಇದು.
ಈ ನಿಟ್ಟಿನಲ್ಲಿ, ಭಾಗವತದ ಒಂದು ಶ್ಲೋಕ ಹೀಗಿದೆ. ಗಮನವಿಟ್ಟು ಅರ್ಥ ಮಾಡಿಕೊಳ್ಳಿ.
♦ಸ್ಮರ್ಯತಾಂ ಹೃಷಿಕೇಶಃ | ಹೃಷಿಕೇಶ ದೃಡೇಷುಚ : | 
ಅದೃೆಡೇ ಹೃಷಿಕೇಷು ಹೃಷಿಕೇಶ ಸ್ಮರಂತಿ ಕೇ?! ♦
ಅರ್ಥ: ಹೃಷಿಕ = ಇಂದ್ರಿಯಗಳು ಗಟ್ಟಿ ಮುಟ್ಟಾಗಿ ಇರುವಾಗ, ಹೃಷಿಕೇಶನಾದ = ಶ್ರೀಹರಿಯ ಸ್ಮರಿಸಬೇಕು, ಸೇವಿಸಬೇಕು. ಹೃಷಿಕವು ಬಲ ಹೀನವಾದಾಗ, ಆ ಹೃಷೀಕೇಶನನ್ನು ಹೇಗೆ ಸೇವಿಸುವೆ?!
ನೋಡಿ…! ಹೃಷೀಕೇಶ ಒಂದೇ ನಾಮವನ್ನು ಬಳಸಿ ಎಂಥ ಮಾತು ಹೇಳಿರುವರು!! 
ಹೃತ್ = ಹೃದಯದಲ್ಲಿ , ಷೀಕೇಶ = ಚೈತನ್ಯ ತುಂಬುವ ಶಕ್ತಿ , ಎಲ್ಲಾ ಇಂದ್ರಿಯಗಳೂ ತಮ್ಮ ಕೆಲಸ ಮಾಡುವ ಸಾಮರ್ಥ್ಯ ಪಡೆವುದು – ಶ್ರೀಹೃಷೀಕೇಶ ಭಗವಂತನಿಂದ. ಸೂರ್ಯ ಮಂಡಲದ ಸಹಸ್ರ ಕಿರಣಕ್ಕೆ ಈ ಹೆಸರು. ಸರ್ವ ಗ್ರಹಗಳ ತಿರುಗುವಂತೆ ಮಾಡುವ ಶಕ್ತಿ, ಈ ನಾಮ. ಮುಂತಾದ ಅನೇಕ ಅರ್ಥಗಳಿವೆ.
✍🏻 ವಿಭುದಾಸ💢